Sunday, July 21, 2013

ಪರದೇಶದಲ್ಲಿ ಭಿಕ್ಷುಕರಾದಾಗ...


ಬಹುಶಃ 2010 ಡಿಸೆಂಬರ್ 26 ಅನ್ಸುತ್ತೆ. ಸರಿಯಾಗಿ ದಿನಾಂಕ ನೆನಪಿಲ್ಲ. ಕೊರಿಯಾದ ಸಿಯೋಲ್ನಲ್ಲಿ ಮೈ ಕೊರೆಯುವ ಚಳಿ. -೧೫ಡಿಗ್ರಿ ಉಷ್ಣಾಂಶ. ಭಯಂಕರ ಚಳಿ ಚರ್ಮ ದಾಟಿ ಮೂಳೆಗೆ ತಾಕುತ್ತಾ ಇತ್ತು. ಆದ್ರೆ ರಾಜಾ ದಿನ, ಎಲ್ಲಿಗೆ ಹೋಗಬಹುದು ಅಂತ ನಾನು, ಸುನಿಲ್ ಬಾಗೆ ಮತ್ತೆ ಶ್ರೀನಿ ಘಾಡವಾದ ಚಿಂತನೆ ನಡೆಸಿದ್ವಿ. ಕೊನೆಗೆ ಎಲ್ಲೋ ಸುತ್ತಾಡಿ ಬರೋಣ ಅಂತ ತಯಾರದ್ವಿ. ನಾನು ನನ್ನಷ್ಟೇ ತೂಕದ ಬಟ್ಟೆ ಧರಿಸಿ ಸಾಕಪ್ಪ ಈ ಚಳಿ ಸಹವಾಸ ಅಂತ ಬೈಕೊಂಡು ಹೊರಟೆ. ಮೊದಲು ಒಂದು ಬನಿಯನ್, ಅದರಮೇಲೆ ಎರಡು ಟಿ-ಶರ್ಟ್, ಅದರಮೇಲೆ ಒಂದು ಸ್ವೆಟರ್, ಅದರಮೇಲೆ ಎರಡು ಪದರದ ಜರ್ಕಿನ್. ಮುಖಕ್ಕೆ ಒಂದು ಉಣ್ಣೆಯ ಮಫ್ಲರ್. ತಲೆ ಮೇಲೆ ಒಂದು ಉಣ್ಣೆ ಟೋಪಿ. ಅಬ್ಬಬ್ಬಾ ನಿಮಿಗೆ ಓದಕ್ಕೇ ಇಷ್ಟು ಕಷ್ಟ ಆದ್ರೆ ನನಗೆ ಇಷ್ಟೆಲ್ಲಾ ಹಾಕ್ಕೊಂಡು ಹೆಂಗಾಗಿರಬೇಡ?

ಈಗ ವಿಷಯಕ್ಕೆ ಬರ್‍ತೀನಿ. ಸರಿ ನಾವು 3 ಜನ ಹೊರಟ್ವಿ. ದಾರಿನಲ್ಲಿ ಸುನಿಲ್ ಬಾಗೆ ತಿನ್ನಕ್ಕೆ ಏನೋ ತರ್ತೀನಿ ಅಂತ ದೊಡ್ಡ ಮಾಲ್ ಒಳಗೆ ಹೋದ. ಆಗ ನಾನು ಶ್ರೀನಿ ಹೊರಗೇ ಕಾಯೋಣ ಅಂತ ನಿರ್ಧರಿಸಿ ಮಾಲ್ ಹೊರಗೆ ಇರೋ ಒಂದು ಕಲ್ಲಿನ ಬೆಂಚ್ ಮೇಲೆ ಕೂತ್ಕೊಂಡ್ವಿ. ತುಂಬಾ ಚಳಿ ಇದ್ದಿದ್ರಿಂದ ನಾವು ತಲೆ ಕೆಳಗೆ ಮಾಡಿ ಕಿವಿನ ಕೈಗಳಿಂದ ಮುಚ್ಕೊಂಡು ಕೂತಿದ್ವಿ. ಇಷ್ಟೊತ್ತಾದ್ರೂ ಬರ್ಲಿಲ್ಲ ಸುನಿಲ್ ಬಾಗೆ ಅಂತ ಬೈಕೋತಾಇದ್ವಿ. ಕೂತಲ್ಲೇ ಹಂಗೇ ನಿದ್ದೆ ಮಂಪರು ಹತ್ತುತ್ತಾ ಇತ್ತು.

ಯಾರೋ ಎಬ್ಬಿಸಿದ್ರು. ತಲೆ ಎತ್ತಿ ನೋಡಿದ್ವಿ. ಕಣ್ಣೆದ್ರಿಗೆ ಕಿತ್ತಳೆ ಹಣ್ಣು ಇತ್ತು. ನಮ್ಮ ಕೈಗೆ ಕಿತ್ತಳೆ ಹಣ್ಣುಗಳು ಬಂತು. ನಾವು ಸೇಮ್ ಭಿಕ್ಷುಕರ ರೀತಿಯಲ್ಲಿ ಕಿತ್ತಳೆ ಹಣ್ಣುಗಳನ್ನ ಇಸ್ಕೊಂಡಿದ್ವಿ. ನಮಗೆ ನಿದ್ದೆ ಕಣ್ಣಲ್ಲಿ ಏನಾಗ್ತಾ ಇದೆ ಅನ್ನೋದು ಗೊತ್ತಗಲೇ ಇಲ್ಲ.ಏನಾಗ್ತಾ ಇದೆ ಅನ್ನೋದು ಒಂದು ಕ್ಷಣ ಆದಮೇಲೆ ತಿಳೀತು. ಇದ್ದಕಿದ್ದ ಹಾಗೆ ಒಂದು ಅಜ್ಜಿ ಬಂದು ನಾವಿಬ್ಬರೂ ಕೂತಿರೋ ಪೋಸ್ ನೋಡಿ ನಮ್ಮನ್ನು ಭಿಕ್ಷುಕರೆಂದು ತಿಳಿದು ನಬ್ಬಿಬ್ಬರಿಗೂ 6 ಕಿತ್ತಳೆ ಹಣ್ಣು ಕೊಟ್ಟು ನಗುತ್ತಾ ನಗುತ್ತಾ ಹೋಯ್ತು. ನಾನು, ಶ್ರೀನಿ ಇಬ್ಬರೂ ಮುಖ ಮುಖ ನೋಡಿ ಏನು ಮಾಡೋದು ಗೊತ್ತಾಗದಲೆ ಜೋರಾಗಿ ನಗು ಬಂತು.

ಅಷ್ಟೊತ್ತಿಗೆ ಆ ಅಜ್ಜಿ ನಿಧಾನಕ್ಕೆ ನಡೆದು ಒಂದಷ್ಟು ದೂರ ಹೋಗಿತ್ತು. ನಾವಿಬ್ಬರೂ ಅಜ್ಜಿ ಹತ್ರ ಹೋಗಿ "ನಾವು ಭಿಕ್ಷುಕರಲ್ಲ"  ಅಂತ ಹೇಳೋಕೆ ಹೊರಟ್ವಿ. ಆದ್ರೆ ಭಾಷೆ ಗೊತ್ತಿಲ್ಲದ ಊರು ನೋಡಿ ಎಲ್ಲಾ ಉಲ್ಟಾ ಹೊಡೀತು. ಆ ಅಜ್ಜಿ ನಾವಿನ್ನೂ ಜಾಸ್ತಿ ಕಿತ್ತಳೆ ಹಣ್ಣು ಕೇಳ್ತಾ ಇದೀವಿ ಅಂತ ಅರ್ಥ ಮಾಡಿಕೊಂಡು ನಗುತ್ತಾ ಇನ್ನೂ ಹೆಚ್ಚು ಕಿತ್ತಳೆ ಹಣ್ಣು ಕೊಡಕ್ಕೆ ಬಂತು. ಓ ಇದ್ಯಾಕೋ ಸರಿ ಹೋಗ್ತಾ ಇಲ್ಲ ಅಂತ ನಾವು ಏನೂ ಮರು ಮಾತಾಡದೆ ಸುಮ್ನೆ ಬಂದ್ವಿ. ಅಷ್ತೊತ್ತಿಗೆ ಬಾಗೆ ಮಾಲ್ ಇಂದ ಬಂದು ನಮಿಗೆ ಕಾಯುತ್ತಾ ಇದ್ದ. ಈ ವಿಷಯ ಕೇಳಿ ಬಿದ್ದು ಬಿದ್ದು ನಗಕ್ಕೆ ಶುರುಮಾಡಿದ. ನಾನು ಮತ್ತೆ ಶ್ರೀನಿ ಇಂಗು ತಿಂದ ಮಂಗನ ಹಾಗೆ ಆಗಿದ್ವಿ. ಹೀಗೆ ನಗುತ್ತಾ ಸಾಗಿತ್ತು ನಮ್ಮ ಪಯಣ. 

ಇಂತಿ ನಿಮ್ಮ,
ದತ್ತ

Saturday, February 20, 2010

ಪ್ರಾಜೆಕ್ಟ್ ಪ್ರಹಸನ...

"ಆ ದಿನಗಳು".. ನಿಜಕ್ಕೂ ಜೀವನದ "ಜಾಲಿ ಡೇಸ್".. ನಾವು ಆಗ ಎಂಜಿನೀಯರಿಂಗಿನ 7 ಸೆಮಿಸ್ಟರ್‌ಗಳನ್ನು ಹರಸಾಹಸದಿಂದ ಮುಗಿಸಿ, ಕೊನೆಯ ಸೆಮಿಸ್ಟರ್ ಪ್ರಾಜೆಕ್ಟ್ ಹುಡುಕಲು ಬೆಂಗಳೂರಿಗೆ ಬಂದಿದ್ದೆವು. ಬೆಳಗ್ಗೆ 9 ಗಂಟೆಗೆ ನಾವು 7-8 ಜನ ಗೆಳೆಯರು ಸೇರಿ ಹೇಗೆ ಪ್ರಾಜೆಕ್ಟ್ ಹುಡುಕಬೇಕು ಅಂತ ತೀರ್ಮಾನಿಸಿ ಮೆಜೆಸ್ಟಿಕ್‌ನಿಂದ ದೊಮ್ಮಲೂರಿನ ಕಡೆಗೆ ಹೊರಟೆವು. ದೊಮ್ಮಲೂರಿನಲ್ಲಿ ಬಸ್ ಇಳಿದಮೇಲೆ ನನಗೆ ಹೊಟ್ಟೆ ಹಸಿವು ಶುರುವಾಗಿ, ಬೆಳಗ್ಗೆ ಅಜ್ಜಿ ಮಾಡಿದ್ದ ಉಪ್ಪಿಟ್ಟನ್ನು ಟೈಂ ಇಲ್ಲ ಎಂದು ನೆಪ ಹೇಳಿ ತಪ್ಪಿಸಿಕೊಂಡು ಬಂದಿದ್ದು ನೆನಪಾಯಿತು. ಆಗ ಎದಿರಿಗಿರುವ "ನ್ಯೂ ಶಾಂತಿ ಸಾಗರ್" ಕಣ್ಣಿಗೆ ಬಿತ್ತು. ನಾನು ತಿಂಡಿ ತಿನ್ನುವಾಗ ನನ್ನ ಜೊತೆ ಕಂಪನಿ ಕೊಡಲಿಕ್ಕೆ ಇನ್ನೂ ೪ ಜನ ತಯಾರಾದ್ರು. ಉಳಿದವರು ಅದೇ ರಸ್ತೆಯಲ್ಲಿ ಯಾವ ಯಾವ ಕಂಪನಿಗಳಿವೆ ಎಂದು ನೋಡಲು ಹೊರಟರು.

ಹೋಟೆಲ್ ಒಳಗೆ ಹೋಗಿ ನಾವು 5 ಜನ ಕೂತ ಕೂಡಲೆ, ಹೊಟೆಲ್‌ನ ಮಾಣಿ ಟಿಪ್ಸ್ ಆಸೆಗೋಸ್ಕರ ನಗುತ್ತಾ 5 ಕಪ್ ನೀರು ಮತ್ತು 5 ಮೆನು ಕಾರ್ಡ್ ತಂದಿಟ್ಟ. ಎಲ್ಲರಿಗೂ ಮಸಾಲೆ ದೋಸೆಯ ಆಸೆಯಾಗಿ ಮೆನು ಕಾರ್ಡ್ ತೆಗೆದು ಮಸಾಲೆ ದೋಸೆ ಹುಡುಕಲು ಶುರು ಮಾಡಿದರು. ಆಗಿನ್ನೂ ಯಾರಿಗೂ ಕೆಲಸ ಸಿಕ್ಕಿರಲಿಲ್ಲ. ದುಡ್ಡಿನ ಬೆಲೆ ಚೆನ್ನಾಗಿ ತಿಳಿದಿತ್ತು. ಮಸಾಲೆ ದೋಸೆ ದರ ನೋಡಿ ಒಬ್ಬೊಬ್ಬರೂ ನನಗೆ ಬೇಡ ತನಗೆ ಬೇಡ ಅಂತ ಕೈ ಎತ್ತಿದರು. ಎಲ್ಲರನ್ನೂ ಹೋಟೆಲಿಗೆ ಕರೆದ "ಪಾಪಿ" ನಾನೆ ಅಗಿದ್ದರಿಂದ ಎನಾದ್ರು ತೊಗೊಳ್ಳೇ ಬೇಕಾದ ಪರಿಸ್ಥಿತಿ ಬಂತು. ಮನೇಲಿ ಅಜ್ಜಿ ಮಾಡಿದ್ದ ಉಪ್ಪಿಟ್ಟು ತಿಂದು ಬಂದಿದ್ರೆ ಹೊಟ್ಟೆ ಮತ್ತೆ ಜೇಬು, ಎರಡೂ ಭದ್ರವಾಗಿರುತಿತ್ತೇನೋ ಅನ್ನಿಸ್ತು. ಆರ್ಡರ್ ಕೊಡಕ್ಕೆ ಮಾಣಿನ ಕರೆದು "ಒಂದು ಪ್ಲೇನ್ ದೋಸೆ ಕೊಡಿ" ಅಂದದಕ್ಕೆ, ಅವನು ಎಲ್ಲ ಐದೂ ಜನರ ಮುಖವನ್ನು ಗುರಾಯಿಸಿ ಸ್ವಲ್ಪ ಸಮಯದ ನಂತರ ಪ್ಲೇನ್ ದೋಸೆ ತಂದು ವಗಾಯಿಸಿದ. ಬಿಲ್ಲ್ ಜೊತೆಗೆ 1 ರೂಪಾಯಿ ಟಿಪ್ಸ್ ಇಟ್ಟಿದ್ದು ಇನ್ನೂ ನೆನಪಿದೆ.

ಸರಿ ತಿಂಡಿ ತಿಂದು, ಇನ್ನು ನಮ್ಮ ಮುಖ್ಯ ಕೆಲಸವಾದ ಪ್ರಾಜೆಕ್ಟ್ ಹುಡುಕುವುದಕ್ಕೆ ಶುರು ಮಾಡಿದೆವು. ನಮ್ಮ ಗುಂಪನ್ನು 4 ಜನರ ಎರಡು ತಂಡಗಳಾಗಿ ತುಂಡರಿಸಿ, ಯಾವ ಗುಂಪು ಯಾವ ಕಡೆ ಹೊಗಬೇಕು ಎಂದು ನಿರ್ಧರಿಸಿದ್ದು ಅಮೂಲ್ಯಳಿಂದ ಬಂದಂಥ ಅಮೂಲ್ಯವಾದಂಥಹ ಸಲಹೆ. ನಾನು, ಸುನಿಲ, ಅಮೂಲ್ಯ ಮತ್ತು ಸುಮ ಒಂದು ಗುಂಪಾಗಿ ಹೊರಟೆವು. ಸಿಕ್ಕ ಸಿಕ್ಕ ಕಂಪನಿಗಳಿಗೆಲ್ಲಾ ನಮ್ಮ ವಿಧ್ಯಾಭ್ಯಾಸದ ಸ್ವವಿವರ ಪತ್ರಗಳನ್ನು(curriculum vitae) ಹಂಚಿ, ನಮ್ಮ ವಿದ್ಯುನ್ಮಾನ ಮತ್ತು ಸಂವಹನ(Electronics & Communications) ಬಗೆಗಿನ ಕಾಳಜಿಯನ್ನು ತೋರಿಸಿ, ಇದೇ ವಿಷಯದಲ್ಲಿ ಯಾವುದಾದ್ರು ಪ್ರಾಜೆಕ್ಟ್ ಇದ್ರೆ ತಿಳಿಸಿ ಎಂದು ವಿವರಿಸುತ್ತಾ ಇದ್ವಿ. ಮಧ್ಯಾನದ ಬಿಸಿಲು ಏರುತ್ತಿದ್ದಂತೆ, ನಮ್ಮ ಹುರುಪು ಕಡಿಮೆಯಾಗತೊಡಗಿತು.

ಎರಡು ಗುಂಪುಗಳೂ ಮತ್ತೆ ಒಟ್ಟಿಗೆ ಸೇರಿ ಮಧ್ಯಾನದ ಊಟ ಮುಗಿಸಿ, ಮತ್ತೆ ನಮ್ಮ ಪ್ರಾಜೆಕ್ಟ್ ಹುಡುಕುವ ಕಾರ್ಯವನ್ನು ಮುಂದುವರೆಸಿದ್ವಿ. ಆದರೆ ಈ ಸಲಿ, ಎಲ್ಲರೂ ಒಂದೇ ಗುಂಪಾಗಿ ಹೊರಟ್ಟಿದ್ದೆವು. ನಮಗೂ ಕಂಪನಿ ಬೋರ್ಡ್ ನೋಡಿ ನೋಡಿ ಸಾಕಾಗಿ ಹೊಗಿತ್ತು.ಸುಮಾರು ಸಂಜೆ ೪ ಗಂಟೆ ಆಗಿರಬಹುದು. ಯಾವುದೋ ಕಛೇರಿಯಲ್ಲಿ, ಸುಂದರ ರಿಸೆಪ್ಶನಿಸ್ಟ್ ಯುವತಿಯೊಬ್ಬಳು ಕೂತಿರಿವುದನ್ನು ಕಂಡು ಸುನಿಲನಿಗೆ ಅಪಾರ ಸಂತೋಷವಾಯಿತು. ಮರಳುಗಾಡಿನಲ್ಲಿ ಓಯಸಿಸ್ ಕಂಡತಾಗಿ, ಸುನಿಲ ಕಛೇರಿಯ ಒಳಗೆ ಹೋದ. ನಾವೂ ಅವನನ್ನು ಹಿಂಬಾಲಿಸಿದ್ವಿ.ಒಳಗೆ ಹೋಗಿ ನಮ್ಮ ನಮ್ಮ ವಿಧ್ಯಾಭ್ಯಾಸದ ಸ್ವವಿವರ ಪತ್ರಗಳನ್ನು(curriculum vitae) ಕೊಟ್ಟು, ನಮ್ಮ ವಿದ್ಯುನ್ಮಾನ ಮತ್ತು ಸಂವಹನ(Electronics & Communications) ಬಗೆಗಿನ ಕಾಳಜಿಯನ್ನು ತೋರಿಸಿ, ಇದೇ ವಿಷಯದಲ್ಲಿ ಯಾವುದಾದ್ರು ಪ್ರಾಜೆಕ್ಟ್ ಇದ್ರೆ ಹೇಳಿ ಅಂತ ತಿಳಿಸಿದೆವು....

... ಅದಕ್ಕೆ ಅವಳು ನಗುತ್ತಾ "ಕ್ಷಮಿಸಿ ಸಾರ್.. ಇದು ರಸಗೊಬ್ಬರ ಕಂಪನಿಯ ಹೆಡ್ ಆಫೀಸ್.." ಅನ್ನಬೇಕೇ. ರಸಗೊಬ್ಬರ ಎಲ್ಲಿ, ಎಲೆಕ್ಟ್ರಾನಿಕ್ಸ್ ಎಲ್ಲಿ. ಒಂದಕ್ಕೊಂದು ಸಂಭಂಧವಿಲ್ಲದ ವಿಷಯಗಳು. ರಸಗೊಬ್ಬರ ಮತ್ತು ಎಲೆಕ್ಟ್ರಾನಿಕ್ಸ್ ಹಿಂದೂ ಮಹಾಸಾಗರದ ಎರಡು ತೀರಗಳಿದ್ದಂತೆ..

ನಾವು ಅಲ್ಲಿಂದ ಹೊರಬಂದು, ಇದೇ ವಿಷಯವನ್ನು ಎಲ್ಲರಿಗೂ ಹೇಳಿ ಸಿಕ್ಕಾಪಟ್ಟೆ, ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾ ಸಾಗಿದೆವು.. ನಿಜಕ್ಕೂ ಅವೆಲ್ಲಾ "ಜಾಲಿ ಡೇಸ್"..

Saturday, February 13, 2010

ಅಡುಗೆ ಮಾಡುವಾಗ ಟೈಂ ಕೇಳಬಾರದು..

ಶುಕ್ರವಾರ ಸಾಯಂಕಾಲ ಆಫೀಸ್ ಮುಗಿಸಿ, "ಸಧ್ಯ, ಇನ್ನು 2 ದಿನ ರಜ..ಶ್ರೀನಿ ಬರ್ತಾನೆ.. ನಾವು 3 ಜನ ಇಡಿಯಟ್ಸ್ ಸೇರಿ "3 ಇಡಿಯಟ್ಸ್" ಸಿನೆಮಾ ನೋಡಣ ಬಾಗೆ(ಅವನ ಪೂರ್ತಿ ಹೆಸರು ಸುನಿಲ್ ಬಾಗೆ. ಕೊರಿಯಾದಲ್ಲಿ ನನ್ನ ರೂಂ ಮೇಟ್ ಮತ್ತು ಕೊಲೀಗ್ ) .. ಏನಂತೀಯಾ?" ಎಂದು, ಶನಿವಾರದ ಅಡುಗೆಗೆ ಬೇಕಾದ ಸಾಮಾನುಗಳನ್ನ ತೆಗೆದುಕೊಳ್ಳಲು ಒಂದು ದೊಡ್ಡ ಶಾಪಿಂಗ್ ಮಾಲ್ ಒಳ ಹೋದ್ವಿ. ವಾರಾಂತ್ಯಕ್ಕೆ ನಮ್ಮ ಮನೆಗೆ ಶ್ರೀನಿ ಕೂಡಾ ಬರುತ್ತಾನೆ.ಅವನು ನಮ್ಮದೇ ಕಂಪನಿಯ ಇನ್ನೊಂದು ಶಾಖೆಯಲ್ಲಿ ಕೆಲಸಮಾಡುತ್ತಿದ್ದಾನೆ.

ಶನಿವಾರ ನಮ್ಮ ರೂಂನಲ್ಲಿ ಎಲ್ಲರೂ ಸಸ್ಯಹಾರಿಗಳು.ಅದಕ್ಕೇ ಪಕ್ಕಾ ಸಸ್ಯಹಾರಿಯಾದ ನನಗೆ ಪ್ರತೀ ಶನಿವಾರ ಮನೆಯಲ್ಲಿ ಅಡಿಗೆ ಭಟ್ಟನ ಪಟ್ಟ. ಅಂದು ನಾನೇ ಅಡಿಗೆ ಪ್ರಪಂಚಕ್ಕೆ ನಳ ಚಕ್ರವರ್ಥಿ! ಬೇರೆ ದಿನಗಳಲ್ಲಿ ನಾನು ಏನೇ ಅಡಿಗೆ ಮಾಡಿದ್ರೂ, ಯಾರೂ ಸ್ಯಾಂಪಲ್ ಕೂಡಾ ನೋಡಲ್ಲ. ಮೊದಲನೆ ಶನಿವಾರ ವಾಂಗಿಬಾತ್ ಮಾಡಿದ್ದೆ. ವಾಂಗಿಬಾತ್ ತುಂಬ ಚೆನ್ನಾಗಿ ಆಗಿಬಿಟ್ಟಿತ್ತು. ಶ್ರೀನಿ ಹತ್ರ ಭೇಷ್ ಅನ್ನಿಸಿಕೊಂಡಿದ್ದೆ. ಬಾಗೆ ಮತ್ತು ಶ್ರೀನಿ ಈ ಸಾರಿ ನನ್ನ ಅಡಿಗೆ ಸವಿಯಲು ಕಾತರದಿಂದ ಕಾದು ಕುಳಿತಿದ್ರು. ಎರಡನೇ ಶನಿವಾರಕ್ಕೆ ನನ್ನ ಜವಾಬ್ದಾರಿ ಜಾಸ್ತಿಯಾಗಿ, ಯಾಕೋ ಹೋದವಾರ ವಾಂಗಿಬಾತ್ ಚೆನ್ನಾಗಾಗಿದ್ದು ನನ್ನ ದುರಾದೃಷ್ಟದಿಂದ ಅಂದುಕೊಂಡೆ.

ಶನಿವಾರ ಬೆಳಗ್ಗೆ ಎದ್ದು "ಸ್ಪೆಶಲ್ ಶ್ಯಾವಿಗೆ ಉಪ್ಪಿಟ್ಟು" ಮಾಡೋಣ ಅಂತ ಕ್ಯಾರೆಟ್, ಆಲೂಗಡ್ದೆ, ಹಸಿರು ಮೆಣಸಿನಕಾಯಿ ಹೆಚ್ಚಿ ಪಕಕ್ಕಿಟ್ಟೆ. ಇವತ್ತು ಅಡಿಗೆ ಸ್ಪೆಶಲ್ ಆಗಿ ಇರಲಿ ಅಂತ ತುಪ್ಪದಲ್ಲಿ ಒಗ್ಗರಣೆ ಹಾಕಿದೆ. ತುಪ್ಪದ ಸುವಾಸನೆ ಮನೆಯಲ್ಲಾ ಹರಡಿ, ಇನ್ನೂ ಗೊರಕೆ ಹೊಡೆಯುತ್ತಿದ್ದ ಇಬ್ಬರಿಗೂ ಎಚ್ಚರ ಆಯ್ತು. ಇಬ್ಬರೂ ಹಾಸಿಗೆ ಇಂದ ಎದ್ದು ಸೀದಾ ಒಲೆ ಹತ್ರ ಬಂದು ಇನ್ನೊಂದು ಸಲ ತುಪ್ಪದ ಸುವಾಸನೆಯನ್ನು ಜೋರಾಗಿ ಎಳೆದುಕೊಂಡು, ಇವತ್ತು ಏನೋ ಸ್ಪೆಶಲ್ ಎಂದು ಸಂತೋಷಟ್ಟರು. ಆಮೇಲೆ ತರಕಾರಿ ಬೇಯಿಸಿ, ಅದಕ್ಕೆ ಹುರಿದ ಶ್ಯಾವಿಗೆಯನ್ನು ಹಾಕಿದೆ. ಮೇಲೆ ತುಪ್ಪದ ಒಗ್ಗರಣೆಯನ್ನು ಹಾಕಿ ಕಲಸತೊಡಗಿದೆ.

ಇವತ್ತು "ಕೊರಿಯನ್ ವಾರ್ ಮೆಮೋರಿಯಲ್" ಹೋಗೊ ಪ್ರೋಗ್ರಾಮ್ ಇತ್ತು. "ಲೆ ಗುರು, ಜಂಕ್ ಫೆಲೋ.. ಇನ್ನು ಎಷ್ಟೊತ್ತೋ? ನೀನು ಅಡಿಗೆ ಮುಗಿಸೋದ್ರೊಳಗೆ, ಅಲ್ಲಿ ಕೊರಿಯನ್ ವಾರ್ ಮೆಮೋರಿಯಲ್ ಬಾಗಿಲು ಮುಚ್ಚಿರ್ತಾರೆ ಅಷ್ಟೆ.." ಅಂತ ಇಬ್ಬರೂ ಬೊಬ್ಬೆಹೊಡೆಯೋದಕ್ಕೆ ಶುರು ಮಾಡಿದರು. "ಆಯ್ತು ಇರ್ರಪ್ಪಾ..ಉಪ್ಪು ಹಾಕಿದ್ರಾಯ್ತು.." ಅಂತ ಹೇಳಿ ಸಮಾಧಾನಪಡಿಸಿದೆ. "ಎಲ್ಲಾ ಅಂದುಕೊಂಡ ಹಾಗೆ ಸೂಪರ್ ಆಗಿ ಆಗ್ತಾ ಇದೆ.." ಎಂದು ಮನಸ್ಸಿನಲ್ಲೇ ಅಂದುಕೊಂಡೆ.

ಅಡುಗೆ ಕೊನೇ ಹಂತಕ್ಕೆ ಬಂದು, ಉಪ್ಪು ಹಾಕದು ಬಾಕಿ ಉಳಿದಿತ್ತು. ಆಹಾ.. ತುಪ್ಪದ ವಾಸನೆ, ಇವತ್ತು ಜಾಸ್ತಿ ತಿನ್ನಬೇಕು ಅನ್ನಿಸಿತು. ಉಪ್ಪು ಹಾಕಣ ಅಂತ ಡಬ್ಬಿ ಕೈಗೆ ತೆಗೆದುಕೊಂಡೆ. ಅಷ್ತೊತ್ತಿಗೆ ಇದ್ದಕ್ಕಿದ್ದ ಹಾಗೆ ಶ್ರೀನಿ "ಲೇ ಗುರು..ಟೈಂ ಎಷ್ಟೋ?" ಅಂದ. ನಾನು ಕೈ ಗಡಿಯಾರ ನೋಡಿ "ಮೂರೂ ವರೆ" ಅಂತ ಹೇಳಿ ತುಪ್ಪದ ವಾಸನೆಯ ಅಮಲಿನಲ್ಲಿ, ದೊಡ್ಡ ಚಮಚದಲ್ಲಿ "ಮೂರೂ ವರೆ"" ಚಮಚ ಉಪ್ಪು ಹಾಕಿಬಿಟ್ಟೆ. ಸಿಕ್ಕಾಪಟ್ಟೆ ಉಪ್ಪು ಜಾಸ್ತಿಯಾಗಿ, ಯಾರೂ "ಸ್ಪೆಶಲ್ ಶ್ಯಾವಿಗೆ ಉಪ್ಪಿಟ್ಟು" ತಿನ್ನಲೇ ಇಲ್ಲ..

ಅದಕ್ಕೇ ಹೇಳಿದ್ದು "ಅಡುಗೆ ಮಾಡುವಾಗ ಟೈಂ ಕೇಳಬಾರದು.." ಅಂತ.

Thursday, January 21, 2010

i10 vs ತಟ್ಟೆ ಇಡ್ಲಿ..

ಆ ದಿನ ಅಕ್ಟೋಬರ್ 26, 2009 ಸಂಜೆ 4 ಗಂಟೆಗೆ ಬಿ.ಎಮ್.ಟಿ.ಸಿ. ಬಸ್ನಲ್ಲಿ ಮೆಜಸ್ಟಿಕ್ ಕಡೆಗೆ ಹೊಗ್ತಾ ಇದ್ದೆ. ಯಮ, ಬದಲಾಗುತ್ತಿರುವ ಹೊಸ ಪ್ರಪಂಚಕ್ಕಾಗಿ ಅಪ್‌ಗ್ರೇಡ್ ಮಾಡಿಕೊಂಡಿರೊ ಹೊಸ ವಾಹನ ಈ ಬಿ.ಎಮ್.ಟಿ.ಸಿ. ಬಸ್ಸುಗಳು(ತನ್ನ ಹಳೆಯ ಕೋಣದ ಬದಲಾಗಿ). ಅದಕ್ಕೇ ವಾರಕ್ಕೆ ಒಂದಾದ್ರೂ ಬಲಿ ಬೀಳ್ತಾನೇ ಇರತ್ತೆ. ಪಾಪ ಅದು ನಿಜಾನೆ . ಈ ಕಾಲದಲ್ಲೂ ಕೋಣ ಹತ್ತಿ ಪ್ರಾಣ ಪಕ್ಷಿಯನ್ನು ಬೆನ್ನಟ್ಟಿ ಒನ್ ವೇ, ನೋ ಎಂಟ್ರಿ, ಮೆಟ್ರೊ ಕಾಮಗಾರಿ ಎಲ್ಲಾ ದಾಟಿ ಬರೋದ್ರೊಳಗೆ, ಯಮನಿಗೇ ಚೆಳ್ಳೆ ಹಣ್ಣು ತಿನ್ಸಿ ಬಿ.ಎಮ್.ಟಿ.ಸಿ. ಬಸ್‌ನಲ್ಲಿ ತಪ್ಪಿಸ್ಕೊಬಹುದು ಅಲ್ವಾ? ಅದಕ್ಕೇ ಇರಬೇಕು ಚಿತ್ರಗುಪ್ತ ಯಮನಿಗೆ ಈ ಐಡಿಯ ಕೊಟ್ಟಿದ್ದು.

ನನ್ನ ಮೊಬೈಲ್ "ಹೂವಿನಾ ಬಾಣದಂತೆ.." ಎಂದು ಹಾಡುತ್ತಾ, ತೂಕಡಿಸುತ್ತಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪಾ ಇದು, ಯಮನ ವಾಹನದಲ್ಲೂ ಸರಿಯಾಗಿ ತೂಕಡಿಸಕ್ಕೆ ಬಿಡಲ್ಲ ಅಂತ ಕಾಲ್ ರಿಸೀವ್ ಮಡಿದೆ. "ಏನೋ ಲೋಫರ್, ಏನ್ ಮಾಡ್ತಾ ಇದಿಯಾ.." ಎಂದು ಚಿರಪರಿಚಿತ ಧ್ವನಿ ಮತಾಡಿತು. ನನಗೆ ತಕ್ಷಣ ತಿಳೀತು, ಇದು ನನ್ನ "ಪ್ರಾಣ ಸ್ನೇಹಿತ" (ಅವನು ಹೇಳಿದ್ದು ಕೇಳದಿದ್ದರೆ ಪ್ರಾಣ ತಿಂತಾನೆ, ಅದಕ್ಕೇ "ಪ್ರಾಣ ಸ್ನೇಹಿತ" ಅಂದೆ) ಸುನಿಲ ಮತಾಡ್ತಾ ಇದಾನೆ ಅಂತ. ನಾನು "ಬಿ.ಎಮ್.ಟಿ.ಸಿ. ಬಸ್ನಲ್ಲಿ ಮೆಜಸ್ಟಿಕ್ ಕಡೆಗೆ ಹೊಗ್ತಾ ಇದೀನಲೇ. ಇವತ್ತು ದಾವಣಗೆರೆಗೆ ಹೋಗ್ಬೇಕಲ್ವಾ" ಅಂದೆ. ಅವನು "ಲೇ ನಾನು, ಪಿನ್ನಿ ಇಲ್ಲೇ ಮೇಕ್ರಿ ಸರ್ಕಲ್ ಹತ್ರ ಕಯ್ತಾ ಇರ್ತಿವಿ. ಇವತ್ತು ನನ್ನ ಹೊಸ ಕಾರ್ ಐ ೧೦ ಡೆಲಿವರಿ ಕೊಡ್ತಾರೆ. ಅದ್ರಲ್ಲೇ ಮೂರೂ ಜನ ದಾವಣಗೆರೆಗೆ ಹೋಗಣ. ಇಲ್ಲೇ ಬಾರಲೇ.." ಅಂದ. ಇದೇನಪ್ಪಾ ಗ್ರಹಚಾರ, ಇವನಿಗೆ ಕಾರ್ ಓಡಿಸಕ್ಕೆ ಬೇರೆ ಬರಲ್ಲ ಅಂತ ಮನಸಿನಲ್ಲೇ ಅಂದುಕೊಂಡೆ. ಒಬ್ಬ ಡ್ರೈವರ್ ನಮ್ಮ ಜೊತೆ ಬರ್ತಾ ಇದಾನೆ ಅಂತ ಗೊತ್ತಾದಮೇಲೆ "ಸರಿ, ಬರ್ತೀನಿ" ಅಂತ ಆ ಕಡೆಗೆ ಹೊರಟೆ.

ಹೊಸದಾಗಿ ಸಿಂಗರಿಸಿದ ಕಾರು ನೋಡಿ ತುಂಬ ಖುಷಿ ಆಯ್ತು. ಸೇಲ್ಸ್ ಎಕ್ಸಿಕ್ಯುಟಿವ್ ಕಾರ್ ಬಗ್ಗೆ ಸುನಿಲನಿಗೆ ವಿವರಿಸುತ್ತಾ ಇದ್ದ. ಸರಿ ಎಲ್ಲಾ ರೆಡಿ ಆಗಿ, ಆ ಅಂಗಡಿಯ ಹುಡುಗಿಯೊಬ್ಬಳು ಕಾರಿಗೆ ಪೂಜೆ ಮಾಡಿ ನಸುನಗುತ್ತಾ ಹೊಸ ಕಾರು ಕೊಂಡದಕ್ಕೆ ಅಭಿನಂದಿಸಿದಳು. ಆಗ ನಮ್ಮ ಸುನಿಲ ಇಂಗ್ಲೀಷ್‌ನಲ್ಲಿ "ನೋ ಮೆನ್ಷನ್. ಇಟ್ಸ್ ಮೈ ಪ್ಲೆಷರ್" ಅಂದ. ಹೊಸಾ ಕಾರು, ಪೂಜೆ ಮಾಡಿದ್ ಕೂಡ್ಲೇ ಸುನಿಲನಿಗೆ ಹುಡುಗಿ ಅಭಿನಂದಿಸಿದಾಗಲೇ ಅಂದುಕೊಂಡೆ, ಇವತ್ತು ಎನೊ ಗ್ರಹಚಾರ ಕಾಯ್ತಾ ಇದೆ ನಮಿಗೆ ಅಂತ. ಹೊಸ ಕಾರಿನಲ್ಲಿ ಹೊರಟಾಗ ರಾತ್ರಿ 7.30. ಆವತ್ತು ಸಂಕಷ್ಟ ಚೌತಿ, ಎಲ್ಲಾ ವಿಘ್ನೇಶ್ವರನ ದೇವಸ್ಥಾನಗಳೂ ತುಂಬಾ ಬ್ಯುಸಿ. ಎಲ್ಲರ ಕಷ್ಟಗಳನ್ನು ನಿವಾರಿಸಲು ಹೋದ ವಿಘ್ನೇಶ್ವರ, ನಮ್ಮ ಹೊಸಾ ಕಾರಿನ ಪೂಜೆಯನ್ನು ಸ್ವೀಕರಿಸುವುದಕ್ಕೆ, ನಾವು ಗೊರಗುಂಟೆ ಪಾಳ್ಯದ ದೇವಸ್ಥಾನದವರೆಗೊ ಬರಬೇಕಾಯಿತು. ಅಲ್ಲಿ ಪೂಜೆಗೆ ಹೂವು ತರಲು ಹೋದ ಸುನಿಲ,ದೊಡ್ಡದೊಂದು ಟೋಪಿ ಹಾಕಿಸಿಕೊಂಡು 80 ರುಪಾಯಿ ಕೊಟ್ಟು ಸ್ವಲ್ಪ ಹೂವು, ಕರ್ಪೂರ ತಂದ. ಪೂಜೆ ಮುಗಿಸಿ ನಮ್ಮ ಪ್ರಯಾಣ ದಾವಣಗೆರೆಗೆ ಶುರು ಆಯಿತು.

ಹೊಸದಾಗಿ ಕಾರ್ ಡೆಲಿವರಿ ಮಾಡಿದಾಗ ಅದರಲ್ಲಿ ಬರಿ 5 ಲೀಟರ್ ಪೆಟ್ರೋಲ್ ಇತ್ತು. ಬೆಂಗಳೂರು ಬಿಟ್ಟಮೇಲೆ ಹಾಕಿಸಿದರಾಯಿತು ಅಂತ ಡ್ರೈವರ್ ಹೇಳಿದಾಗ ಓಕೆ ಅಂತ ಸುನಿಲ ತಲೆ ಅಲ್ಲಾಡಿಸಿದ. ನಾನು ಮತ್ತು ಪಿನ್ನಿ ಸುನಿಲನಿಗೆ ಯಾವುದಾದ್ರು ಡಾಬಾದಲ್ಲಿ ಪಾರ್ಟಿ ಕೊಡ್ಸು ಅಂತ ತಲೆ ತಿನ್ನಕ್ಕೆ ಶುರು ಮಾಡಿದ್ವಿ. ಅವನೂ ಹೊಸ ಕಾರ್ ತೊಗೊಂಡಿದ್ದರ ಹುರುಪಿನಲ್ಲಿ ಪಾರ್ಟಿ ಕೊಡಿಸಕ್ಕೆ ಒಪ್ಪಿದ್ದ. ಬೆಂಗಳೂರು ಬಿಟ್ಟು ಹೊರ ಬಂದಮೇಲೆ ಯಾವುದೋ ಹಳ್ಳಿಯ ಬಳಿ ಪೆಟ್ರೋಲ್ ಬಂಕಲ್ಲಿ ಕಾರ್ ನಿಲ್ಲಿಸಿದಾಗ ಸುನಿಲ ತನ್ನ ಸಿಟಿ ಬ್ಯಾಂಕ್ ಪ್ಲಾಟಿನಮ್ ಕ್ರೆಡಿಟ್ ಕಾರ್ಡ್ ತೊಗೋತಾರಾ ಅಂತ ವಿಚಾರಿಸಿದ. ನಾವು ಅವನ ತಲೆಗೆ ಒಂದು ಬಿಟ್ಟು "ಹಳ್ಳಿನಲ್ಲಿ ಯಾವನಾದ್ರೂ ಕ್ರೆಡಿಟ್ ಕಾರ್ಡ್ ತೊಗೊತನೇನಲೇ, ದುಡ್ಡು ಕೊಡು" ಅಂತ ಕೇಳಿದ್ದಕ್ಕೆ, "ನನ್ನತ್ರ ದುಡ್ಡು ಇಲ್ಲಮ್ಮಾ.." ಅನ್ನೋದೇ? ಹಂಗೆ ಪೆಟ್ರೋಲ್ ಬಂಕ್ ಆದ್ಮೇಲೆ ಪೆಟ್ರೋಲ್ ಬಂಕ್ ಸುತ್ತಿ ಸುತ್ತಿ ಸಾಕಾಯ್ತು. ನಮ್ಮ ದುರಾದ್ರುಷ್ಟಕ್ಕೆ ಎಲ್ಲಿ ಕ್ರೆಡಿಟ್ ಕಾರ್ಡ್ ತೊಗೊತಾರೊ ಅಲ್ಲಿ ಪೆಟ್ರೋಲ್ ಇಲ್ಲ, ಎಲ್ಲಿ ಪೆಟ್ರೋಲ್ ಇದಿಯೋ ಅಲ್ಲಿ ಕ್ರೆಡಿಟ್ ಕಾರ್ಡ್ ತೊಗೊಳಲ್ಲ. ದೂರ ಸಾಗಿದಷ್ಟೂ ಕಾರಿನ ಪೆಟ್ರೋಲ್ ಖಾಲಿ ಆಗ್ತಾ ಇತ್ತು, ಹಾಗೆ ನಮ್ಮ ಡಾಬಾದ ಪಾರ್ಟಿ ಆಸೆ ಕೂಡಾ ಆಸೆಯಾಗೇ ಉಳಿಯತ್ತೇನೋ ಅನ್ನಿಸಕ್ಕೆ ಶುರು ಆಯ್ತು. ನಮಗೂ ಕಾರ್ಡ್ ತೊಗೊತೀರಾ ಅಂತ ಕೇಳಿ ಕೇಳಿ ಸಾಕಾಗಿ ಮುಂದಿನ ಬಂಕಲ್ಲಿ ಕಾರ್ಡ್‌ನ ಪೆಟ್ರೋಲ್ ಹಾಕುವವನ ಕೈಗೆ ಕೊಟ್ವಿ. ಅವನಿಗೆ ಕತ್ತಲಲ್ಲಿ ಸರಿಯಾಗಿ ಕಾಣಿಸದೆ "ಸಾರ್ ಇದು ವಿಜಿಟಿಂಗ್ ಕಾರ್ಡಾ ?" ಕೇಳಿದಕ್ಕೆ, ನಾವು "ಅಣ್ಣಾ ನಮಸ್ಕಾರ.. ನೆಕ್ಟ್ ಟೈಮ್ ಬರ್ತಿವಿ" ಅಂತ ಹೇಳಿ ಮತ್ತೇನೂ ಮತಾಡದೆ ಮುಂದೆ ನಡೆದೆವು.

ಓ, ಇದ್ಯಾಕೋ ಸರಿಹೋಗ್ತಿಲ್ಲಾ ಅಂತ ನಾನು, ಪಿನ್ನಿ ನಮ್ಮ ಹತ್ರ ಇದ್ದ 800 ರುಪಾಯಿ ಜೋಡಿಸಿ ಪೆಟ್ರೋಲ್ ಹಾಕಿಸಿದ್ವಿ. ಅಷ್ಟೊತ್ತಿಗೆ ರಾತ್ರಿ 10 ಗಂಟೆ. ಮುಂದೆ ತುಮಕೂರು ರಸ್ತೆಯಲ್ಲಿ ಟೋಲ್ ಫೀ ಕೊಟ್ಟು, 65 ರುಪಾಯಿ ದುಡ್ಡು ಉಳಿದಿತ್ತು. ಕಾರಿನ ಪೆಟ್ರೋಲ್ ಹಸಿವು ಸದ್ಯಕ್ಕೆ ತೀರಿ, ನಮ್ಮ ಹೊಟ್ಟೆ ಹಸಿವು ಶುರು ಆಗಿತ್ತು. ನಮ್ಮ ಡಾಬಾದ ಪಾರ್ಟಿ ಕೊನೆಗೆ ಕ್ಯಾತಸಂದ್ರದ ತಟ್ಟೆ ಇಡ್ಲಿ ಹೋಟೆಲಿನಲ್ಲಿ ಅಂತ ಡಿಸೈಡ್ ಮಾಡಿ, ಪವಿತ್ರಾ ಇಡ್ಲಿ ಹೋಟೆಲ್ ಒಳ ಹೋದ್ವಿ. ಡ್ರೈವರ್ ಸೇರಿ 4 ತಟ್ಟೆ ಇಡ್ಲಿ ಆರ್ಡರ್ ಮಾಡಿದ್ವಿ. ಹೊಟ್ಟೆ ಹಸಿವು ಸಿಕ್ಕಾಪಟ್ಟೆ ಇದ್ದಿದ್ರಿಂದ ಬೇಗ ಬೇಗ ತಿಂದು ಮುಗಿಸಿ, ಇನ್ನೊಂದು ಪ್ಲೇಟ್ ಆರ್ಡರ್ ಮಾಡಬೇಕು ಅನ್ನಿಸಿತು. ಆಮೇಲೆ ಸಿಕ್ಕಾಪಟ್ಟೆ ತಿಂದು ಬಿಲ್ ಕೊಡಕ್ಕೆ ದುಡ್ಡು ಇಲ್ಲದಲೆ, ನಾಲ್ಕೂ ಜನ ಇಡ್ಲಿ ಹಿಟ್ಟು ರುಬ್ಬೋ ಸೀನ್ ಕಣ್ಣು ಮುಂದೆ ಬಂತು...

..."ಲೇ..ಸುನಿಲ.. ಬಡ್ಡೀಮಗನೇ.. ನಾಲ್ಕೂವರೆ ಲಕ್ಷದ ಹೊಸ ಕಾರಲ್ಲಿ ಬಂದು ಇಡ್ಲಿ ಹಿಟ್ಟು ರುಬ್ಬೋ ಹಂಗೆ ಮಾಡ್ತೀಯಲಲೇ.. ನಿನಗೆ ನಮ್ಮ ಮೇಲೆ ಸಿಟ್ಟು ಇದ್ದಿದ್ರೆ ಊರಿಗೆ ಬಂದಮೇಲೆ ಹೆಂಗಾದ್ರೂ ತೀರಿಸ್ಕೊಬಹುದಾಗಿತ್ತಲಲೇ. ಇಂಥಾ ಸೀನೆಲ್ಲಾ ಬೇಕಾಗಿತ್ತಾ ನಮಿಗೆ.. " ಅಂತ ನಾನು, ಪಿನ್ನಿ ಅವನಿಗೆ ಬಯ್ಯಕ್ಕೆ ಶುರು ಮಡಿದ್ವಿ. ಅದಕ್ಕೆ ಸುನಿಲ "ಅದಿಕ್ಯಾಕೆ ಇಷ್ಟೊಂದ್ ತಲೆ ಕೆಡಿಸ್ಕೋತೀರಲೇ.. ಎನಾದ್ರು ದುಡ್ಡು ಕಡಿಮೆ ಬಿದ್ರೆ, ಡ್ರೈವರ್ ಹತ್ರ ಸಾಲ ತೊಗೊಂಡ್ರೆ ಆಯ್ತು.." ಅಂದುಬಿಟ್ಟ. ಇದನ್ನೆಲ್ಲಾ ಗಮನಿಸುತಿದ್ದ ಡ್ರೈವರ್ "ಸಾರ್..ನನಿಗೆ ಒಂದೇ ಇಡ್ಲಿ ಸಾಕು..ಹೊರಗಡೆ ಸಿಗರೇಟ್ ತೊಗೊತಾ ಇರ್ತೀನಿ.. " ಅಂತ ಜಾಗ ಖಾಲಿ ಮಾಡಿದ. ಈಗ ನಾವು ಉಳಿದಿದ್ದು ಬರಿ ಮೂರೇ ಜನ. ಆಮೇಲೆ ಹೋಟೆಲ್ ಮಾಣಿನ ಕರೆದು ಒಂದು ಇಡ್ಲಿಗೆ 14 ರುಪಾಯಿ ಅಂತ ತಿಳಿದುಕೊಂಡು, ಮೊಬೈಲ್ ಕ್ಯಾಲ್ಕ್ಯುಲೇಟರ್‌ನಲ್ಲಿ ಒಟ್ಟು ಬಿಲ್ಲ್ ಎಷ್ಟು ಲೆಕ್ಕಾ ಹಾಕಿದ್ವಿ. (ನಮಿಗೇನು ಬಾಯಲ್ಲಿ ಲೆಕ್ಕಾ ಮಾಡಕ್ಕೆ ಬರಲ್ಲಾ ಅಂತ ಅಲ್ಲ, ಸುಮ್ನೆ ಟೆಕ್ನಾಲಜಿ ಬಳಸೋಣ ಅಂತ ಮೊಬೈಲ್ ಉಪಿಯೋಗಿಸಿದ್ವಿ. ಒಂದು ರುಪಾಯಿ ಕಡಿಮೆ ಅದ್ರೂ ಆಮೇಲೆ ಹಿಟ್ಟು ರುಬ್ಬಬೇಕಲ್ಲಾ ಅದಕ್ಕೆ). ಸದ್ಯ ಪಿನ್ನಿ ಹತ್ರ ದುಡ್ದು ಸರಿಯಾಗಿ ಇತ್ತು. ಬಿಲ್ಲ್ ಕೊಡುವಾಗ ಸಮೀಪದಲ್ಲಿರಿವ ಎ.ಟಿ.ಮ್ ಬಗ್ಗೆ ವಿಚಾರಿಸಿದ್ವಿ. "ನನ್ನ ಮಕ್ಳಾ.. ಹೊಸ ಕಾರಿನಲ್ಲಿ ಕರಕೊಂಡು ಬಂದ್ರೆ ಇಷ್ಟೊಂದು ಬೈತೀರಾ.. ನಿಮ್ಮ ಋಣ ನನಿಗೆ ಬೇಡವೇ ಬೇಡ, ನಿಮ್ಮ ದುಡ್ಡು ನೀವೇ ಇಟ್ಕೋಳಿ .." ಅಂತ ಗೊಣಗುತ್ತಾ ಸುನಿಲ ನಮಿಗೆ ದುಡ್ಡು ವಾಪಸ್ ಮಾಡಿದ.

ಕಾರು ದಾವಣಗೆರೆ ಕಡೆಗೆ ವೇಗವಾಗಿ ಹೊರಟಿತು. ಕಾರಿನ ವೇಗ ಹೆಚ್ಚುತ್ತಿದ್ದಂತೆ ದೇಹ ನಿದ್ರೆಯ ಕೊಡೆಗೂ ಮತ್ತು ಮನಸ್ಸು ಕನಸಿನ ಕಡೆಗೂ ಹೊರಳಿತು...